ಡಿಸೆಂ 7, 2016

ನಿತ್ಯೋತ್ಸವ.


೧.ಉದಯಾನುಭವ.
ಹತ್ತು ರಂಗಿನಪೂರ್ವ ಸಭೆ ಪೂರ್ವ ದಿಕ್ಕಿನಲಿ
ಸಭಿಕರೇ ಕಣ್ಣುಗಳು : ಭಾವ ಚಪ್ಪಾಳೆ.
ನಸು ನೀಲಿ ಹಾಳೆಗಳ ಕೆಂಬರಹದಡಿಯಲ್ಲಿ
ಬಂಗಾರ ಶಾಯಿಯಲಿ ಸಹಿಯ ಮಾಲೆ.

ಎಂಟಾದರೂ ದಿನವು ನಿದ್ದೆ ನಂಟನು ಬಿಡದೆ
ನಾಟಿನಂತಲುಗದೆಯೆ ಇದ್ದೆ ಹೊದ್ದು.
ಇಂದಕಸ್ಮಾತ್ತಾಗಿ ಬೆಳಗೆದ್ದು ನೋಡಿದರೆ
ದೇವರ್‍ಏ, ಏನೆಂಥ ಕಣ್ಣ ಮುದ್ದು.

ನಾ ಹೊದ್ದು ಬಿದ್ದಿದ್ದ ಬೆಚ್ಚೆನೆಯ ಈ ರಗ್ಗು
ಕಣ್ಣ ಮುಂದೆಳೆದಿರುವ ತೆರೆಯಂತಿದೆ.
ತೆರೆಯ ಈ ಕಡೆ ಮನಸು. ತೆರೆಯ ಆ ಕಡೆ ಪುನ್ಯ--
ಭೇಟಿಯಾಗದೆ ಸೊರಗಿತೆಂದೆನಿಸಿದೆ.

ಭಾಗ್ಯವಿರಬೇಕಹಹ, ಉದಯದನುಭವ ಗಳಿಗೆ,
ಎಲ್ಲರಿಗು ದೊರೆಕೊಳ್ಳದಿಂಥ ಸ್ವತ್ತು.
ಎನೆಷ್ಟು ಉಅಪಮೆಯಗಳ ವೆಚ್ಚ ಮಾಡಿದರೆನು,
ಮೂಕನುಗೆ ತಿಳಿಯುವುದೆ ನುಡಿಯ ಗತ್ತು?


೨.ಎಲ್ಲ ಮರೆತಿರುವಾಗ.
ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನಿನಪೇ;
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ, ಮಧುರ ನೆನಪೇ?

ಕಪ್ಪು ಕಣ್ಣೆನ ನೆಟ್ಟ ನೋಟದರೆಚಣವನ್ನೆ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ;
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ
ಹಿರಿದು ಕೊಲ್ಲುಬಳಿಗೆ ಸಾರದಿರು ನೆನಪೇ.
ಎಲ್ಲ ಮರೆತಿರುವಾಗ....

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ;
ಭವ್ಯ ಭವಿತವ್ಯಕ್ಕೆ ಮೊಗ ಮಡಿ ನಿಂತಿರುವೆ,
ಬೆನ್ನಲ್ಲೆ ಇರಿಯದಿರು, ಓ! ಚೆನ್ನ ನೆನಪೇ,
ಎಲ್ಲ ಮರೆತಿರುವಾಗ.....

 
೩.ಎಂಥೆಂಥ ಜೀವಗಳು.
ಎಂಥೆಂಥ ಜೀವಗಳು ಬಾಳಿ ಬೆಳಗಿದವಿಲ್ಲಿ
ಶ್ರೀಗಂಧ ಬೆಳೆವಂಥ ನಾಡಿನಲ್ಲಿ;
ಹೊನ್ನಂಥ ಭಾವಗಳು ಆಳಿ ಮೊಳಗಿದವಿಲ್ಲಿ
ಸಿರಿವಂತ ನೆಲದೊಡಲ ಹಾಡಿನಲ್ಲಿ.

ಮಣ್ಣ ಹುಡಿ, ಹಣ್ಣು ಮಿದಿ, ಹುಲ್ಲೆಸಳೊ, ಮಳೆ ಬಿಸಿಲೊ
ಸಮನಾದ ಪ್ರೀತಿಯಲಿ ಹಾಡಿ ಹೊಗಳಿ
ಕಣ್ನು ಕುಡಿ ಎಂದೆಣಿಸಿ ನಾಡು- ನುಡಿ ಗಣಿಸಿ
ಎತ್ತಿ ಕುಣಿಸಿದರೊಲ್ಮೆ ಕೆಚ್ಚು ಕೆರಳಿ.

ಹುಟ್ಟಿದಾರಭ್ಯ ಹಿಡಿದೊಂದು ಹೆಗ್ಗುರಿಯ
ಮುಟ್ಟಲದನೆಡೆಬಿಡದೆ ತುಯ್ದು ಜನರು;
ಕ್ರೌರ್ಯಗಳ ಕುದುಗೋಲು ಕೊಚ್ಚುತಿದ್ದ್ರು ಕೊರಳ
ಸತ್ಯಕಲ್ಲದೆ ಬಾಯಿ ಬಿಡದ ಘನರು.

 
೪.ನಿನ್ನ ಹಿರಿಮೆ.
ನಿನ್ನ ಅನುರಾಗವೇ ಬೇಗಿರುವುದೆನ್ನೆದೆಯ
ಇರುಳು ಬಾನಿನ ತುಂಬ ಬಿಂಬವಾಗಿ;
ನಿನ್ನ ಸಹವಾಸವೇ ಸತತವೂ ಕಾದಿಹುದು
ಬಾಳ ದಾರಿಯ ತೋರುಗಂಬವಾಗಿ.

ನಿಟ್ಟುಸಿರ ಬೆಂಕಿಯಲಿ ಅನುದಿನವು ಬೆಂದರೊ
ಸವಿ ನುಡಿಯ ನರುಗಂಪು ತೇಲಿರುವುದು;
ಕಂಬನಿಯ ಉಪ್ಪಿನಲಿ ಕೈ ತೊಳೆದು ನೊಂದರೂ
ನಸು ನಗೆಯ ಸವಿಯನ್ನೆ ಸೂಸಿರುವುದು.

ಯಾವ ಪುಣ್ಯವೊ ಕಾಣೆ, ನಿನ್ನ ಒಲವಿನ ತೊರೆಗೆ
ನನ್ನ ಮನಸಿನ ನೆರೆಯ ಹರಿಸಿರುವುದು;
ಯಾವ ರುಣವೋ ಏನೊ ನಿನ್ನ ನೆಮ್ಮದಿ ಕರೆಗೆ
ನನ್ನ ಬಾಳಿನ ಹೊರೆಯ ಸರಿಸಿರುವುದು.

 
 
೫.ಬೇಸರಾಗಿದೆ ಮಾತು.
ಬೇಸರಾಗಿದೆ ಮಾತು, ಭಾರವಾಗಿದೆ ಮೌನ;
ನೋವು ಕರಗಿದೆ ಕಣ್ಣಲ್ಲಿ;
ಅಡಿಗೆ ಚುಚ್ಚಿದ ಮುಳ್ಳು ಒಳಗದೆ ಮುರಿಯದಂತೆ
ಭಾವ ಕುಟುಕಿದೆ ಮನದಲಿ.

ಮುರಿದ ಪ್ರೀತಿಯ ಮರೆಯೆ ಬಾಳಿನೊಳ ಹೊಕ್ಕಿರಲು
ಸಾವ ಭಯ ತಾನೆರಗಿತೊ.
ಮಯೆಗೆ ಆಸೆರೆ ಪಡೆಯೆ ಹಾವ ಹೆಡೆಯಲಿ ನಿಂತ
ಹಕ್ಕಿಯಂದದಿ ಚೀರಿತೊ.

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ
ಕನಸುವಂತೆಯೆ ಮೊಳಕೆಗೆ;
ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ
ಹೊಸತು ಬದುಕಿನ ಬಳಕೆಗೆ.

ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ
ಜೀವ ರೆಕ್ಕೆಯ ಬಿಚ್ಚಿತೊ;
ಯಾವ ಗವಿಗತ್ತಲಿನ ಮೌನ ಭಾರವ ಕನಸಿ
ಇದ್ದ ಹಕ್ಕೆಯ ಬಿಟ್ಟಿತೊ.



೬.ದೀಪಾರತಿ.
ನೀನುರಿಸಿದ ಹೊಂಬೆಳಕಿನ ಕಿಡಿ ಅರಳಿದೆ ಇಲ್ಲಿ,
ಕುಡಿ ಚಾಚಿದೆ ಇಲ್ಲಿ.

ನೀ ಸುರಿಸಿದ ರಸ ತೈಲದ ಗುಡಿ ಹಾರಿದೆ ಇಲ್ಲಿ;
ಗುಡಿ ಮೀರಿದೆ ಇಲ್ಲಿ.

ನೀ ಬಿತ್ತಿದ ದಯೆ ಹಬ್ಬಿದೆ ಮನು ಸಂತತಿಯಲ್ಲಿ,
ಜನ ಸಮ್ಮತಿಯಲ್ಲಿ;

ನೀನೆತ್ತಿದ ತನು ಸಾಗಿದೆ ಭಾವೋನ್ನತಿಯಲ್ಲಿ,
ನವ ಸದ್ಗತಿಯಲ್ಲಿ.

ನಿನ್ನದೆ ನೆಲೆ, ನಿನ್ನದೆ ಮನೆ; ನಿನ್ನೆದೆಯೊ ಉದಾರ;
ನಾನೂಳಿಗಕಿರುವಲ್ಪನು- ನೀ ವಾರಸುದಾರ.
ಬೆಳೆಬೆಳೆಯಲಿ ನಿನ್ನದೆ ಘನ ಮಹಿಮಾಂಕುರ ಒಳಗೆ;
ಬೆಳಬೆಳಗಲಿ ಬಿರುದಾವಳಿ, ನಾಮಾಂಕಿತ ಹಲಗೆ.

ಸೆಪ್ಟೆಂ 1, 2012

ಕೆ.ಪಿ.ಪೂರ್ಣಚಂದ್ರ ತೇಜಸ್ವಿ


[ಕನ್ನಡ]

"ಎದ್ದೇಳಿ ಎಚ್ಚರಗೊಳ್ಳಿ"
ಎಂದು ಸಂದಣಿಯಲ್ಲಿ ಅಬ್ಬರಿಸಿ ಕೂಗಿತೊಂದು ವಾಣಿ

"ಬೆಚ್ಚಿ ಬೀಳುವಿರೇನು ಪೆಚ್ಚುಗಳಿರಾ!
ಹತ್ತಿಪ್ಪತ್ತು ವರುಷ ಸುಪ್ಪತ್ತಿಗೆಯ ಮೇಲೆ
ಸರಸ ಸಲ್ಲಾಪದಲಿ ಕಳೆದುದ್ದಾಯ್ತು ಕಾಲ.
ಕವಿವ ಕಾಳರಾತ್ರಿಯ ಕೋಳ
ಕಾಣದೇ ಮರುಳ."

"ಉತ್ತರದ ಗಡಿಯ ನೆತ್ತರಿನ ಹೊನಲ
ಬಿತ್ತರದ ರಣಕಹಳೆ ಹೊಯ್ಲುಗಳ
ಕಂಡು ಕೇಳದ ನೀವು; ಕೀಟಗಳಿರಾ
ಎದ್ದೇಳಿ ಎಚ್ಚರಗೊಳ್ಳಿ"

ಎಂದಂದು ಬಾನುಲಿಯಲ್ಲಿ ಗಟ್ಟಿ
ಚೆಕ್ಕಿಗೊಂದು ರುಜು ಹೆಟ್ಟಿ
ಮಲಗಿದನು ಕವಿಯು
ಕಕ್ಕಾಬಿಕ್ಕಿಯಾಗಿ ರಾತ್ರಿಗೆ ಸರಿದಿತ್ತು ಬುವಿ

ಮಾರ್ಚ್ 28, 2012

‘ಕನ್ನಡ ಹಾಸ್ಯ’

‘ಕನ್ನಡ ಹಾಸ್ಯ’ »» ಸೊಳ್ಳೆ ಕಾಟ ತಡೆಯಲಾರದೆ ಬೂಬಣ್ಣ ಮಂಚದ ಕೆಳಗೆ ಮಲಗಿದ. ಆಗ ಅಲ್ಲಿಗೆ ಬಂದ ಮಿಂಚು ಹುಳವ ನೋಡಿ, ಸೊಳ್ಳೆ ಅಂದುಕೊಂಡು, "ಅಯ್ಯೋ ಪಾಪಿ! ಬ್ಯಾಟರಿ ತಗೊಂಡು ಇಲ್ಲಿಗೂ ಬಂದ್ಯಾ ನೀನು!!" »» ಹುಡುಗ: ಐ ಲವ್ ಯೂ ಕಣ್ರೀ… ಹುಡುಗಿ (ಗುರ್ರಾಯಿಸುತ್ತ): ನನ್ನ ಚಪ್ಪಲಿ ಸೈಜ಼್ ಗೊತ್ತಾ… ಹುಡುಗ: ಛೇ! ಏನ್ ಹುಡ್ಗೀರಪ್ಪಾ… ಐ ಲವ್ ಯೂ ಅಂದ್ರೆ ಸಾಕು, ಗಿಫ್ಟ್ ಕೇಳೋಕೆ ಶುರು ಮಾಡ್ತಾರೆ… »» ವೈದ್ಯ: ನಿಮ್ಮ ದೇಹದಲ್ಲಿ ೨೬೫ ಮೂಳೆಗಳಿವೆ.. ಬೂಬಣ್ಣ: ಮೆತ್ತಗೆ ಹೇಳೊ! ಹಿಂದ್ಗಡೆ ನನ್ನ ನಾಯಿ ಕುಳಿತಿದೆ.. »» ಒಂದು ಬೋರ್ಡ್ ಹೀಗಿತ್ತು: ಬನಾರಸ್ ಸೀರೆ- ರೂ.10 ನೈಲಾನ್ ಸೀರೆ- ರೂ.8 ಕಾಟನ್ ಸೀರೆ- ರೂ 5 ಇದನ್ನು ನೋಡಿದ ಹೆಂಗಸೊಬ್ಬಳು, ತನ್ನ ಗಂಡನ ಬಳಿ: ರೀ, ಐನೂರು ರೂಪಾಯಿ ಕೊಡಿ. ನಾನು ಐವತ್ತು ಸೀರೆ ತಗೊಂಡು ಬರ್ತೀನಿ.. ಗಂಡ: ಲೇ, "ಇಸ್ತ್ರೀ ಅಂಗಡಿ" ಕಣೇ ಅದು!! »» ವೈದ್ಯ: ನೀವು ನಿಮ್ಮ ಮಿತ್ರನನ್ನು ಒಂದು ಘಂಟೆ ಮೊದಲೇ ಆಸ್ಪತ್ರೆಗೆ ತಂದಿದ್ದರೆ ಆತ ಉಳಿಯುತ್ತಿದ್ದ… ಮಿತ್ರ (ಸಿಟ್ಟಿನಿಂದ): ಲೋ ಗೂಬೆ, ಅಪಘಾತ ಆಗಿ ಅರ್ಧ ಘಂಟೆ ಅಷ್ಟೇ ಆಯ್ತು… »» ಹೆಂಡತಿ ಗಂಡನಿಗೆ ವ್ಯಾಕರಣ ಕಲಿಸುತ್ತಿದ್ದಳು: "ನಾನು ಸುಂದರವಾಗಿದ್ದೇನೆ." ಇದು ಯಾವ ಕಾಲ? ಗಂಡ: ಭೂತಕಾಲ… »» ಪಾಶ್ಚಾತ್ಯ ಜೀವನಶೈಲಿಯ ದುಷ್ಪರಿಣಾಮಗಳು: ಹೆಂಡತಿ ಓಡೋಡಿ ಬಂದು, ಗಂಡನ ಬಳಿ: ರ್ರೀ!!! ಬೇಗ ಬನ್ರೀ.. "ನಿಮ್ಮ" ಮಕ್ಕಳು ಹಾಗೂ "ನನ್ನ" ಮಕ್ಕಳು ಸೇರಿಕೊಂಡು "ನಮ್ಮ" ಮಕ್ಕಳನ್ನು ಹೊಡೆಯುತ್ತಿದ್ದಾರೆ… »» ಹುಡುಗ: ಹುಡುಗರ ಹೃದಯ ದೇಗುಲದಷ್ಟು ಪವಿತ್ರವಾದುದು… ಹುಡುಗಿ: ಅದು ಹೇಗೆ? ಹುಡುಗ: ಐ ಲವ್ ಯೂ ಅಂದಾಕ್ಷಣ ಚಪ್ಪಲಿ ತೆಗೀತೀರಲ್ಲಾ.. ಅದಕ್ಕೆ »» ಅಂದು ಬೂಬಣ್ಣ ಮೊದಲ ಸಲ ವಿಮಾನ ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದನು.. ಬೂಬಣ್ಣ: ವಾಹ್! ಅವರೆಲ್ಲಾ ಹೇಳಿದ್ದು ನಿಜ! ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ… ಗಗನ ಸಖಿ(air hostess): ಸಾರ್! ಅವುಗಳು ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ… »» ಒಮ್ಮೆ ಬೂಬಣ್ಣ ಹಾಗೂ ಚೋಮಣ್ಣ ಒಂದು ಉದ್ಯಾನವನಕ್ಕೆ ಹೋಗುತ್ತಾರೆ. ಅಲ್ಲಿ ಕೊಳದಲ್ಲಿ ಮೀನುಗಳು ಈಜಾಡುತ್ತಿರುತ್ತವೆ.. ಚೋಮಣ್ಣ: ಬೂಬಣ್ಣ! ಕೊಳಕ್ಕೆ ಬೆಂಕಿ ಬಿದ್ದರೆ ಅದರಲ್ಲಿರುವ ಮೀನುಗಳ ಪಾಡೇನಾಗುತ್ತದೆ? ಬೂಬಣ್ಣ: ಏನಾಗಲ್ಲ! ಅವುಗಳು ಪಕ್ಕದಲ್ಲಿರುವ ಮರಗಳನ್ನೇರಿ ಕುಳಿತುಕೊಳ್ಳುತ್ತವೆ ಅಷ್ಟೇ.. »» ಒಮ್ಮೆ ಬೂಬಣ್ಣ ಹಾಗೂ ಮಿತ್ರರು ಪ್ರವಾಸಕ್ಕೆ ಹೋಗುತ್ತರೆ.. ರಾಮಣ್ಣ: ಅಲ್ನೋಡು! ಆ ಪುರಾತನ ದೇವಸ್ತಾನ ಸುಮಾರು ೪೦೦೦ (4000)(ನಾಲ್ಕು ಸಾವಿರ) ವರ್ಷ ಹಳೆಯದು.. ಬೂಬಣ್ಣ: ಸುಮ್ನೆ ಬೋಗಳೆ ಬಿಡಬೇಡ! ಈಗಿನ್ನೂ ೨೦೦೯ (2009)! »» ಒಮ್ಮೆ ಬೂಬಣ್ಣನಿಗೊಂದು ಚಿಕ್ಕ ಹೊಟ್ಟೆಯ ಆಪರೇಷನ್ ಆಯ್ತು. ಅವನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಮೊದಲು, ವೈದ್ಯರು(doctor) ಇನ್ನೊಂದು ಕ್ಷ-ಕಿರಣ ತಪಾಸಣೆಗೊಳಪಡಿಸಿದರು(x-ray test). ಆಗ ವೈದ್ಯರಿಗೆ ತಮ್ಮ ಕೈಗವಸು(gloves) ಇನ್ನೂ ಬೂಬಣ್ಣನ ಹೊಟ್ಟೆಯೊಳಗೇ ಇರುವ ಸಂಗತಿ ತಿಳಿಯಿತು! ವೈದ್ಯರು(ಈ ವಿಷಯ ಬೂಬಣ್ಣನಿಗೆ ತಿಳಿಸುತ್ತಾ..): ಬೂಬಣ್ಣ! ಈ ತಪ್ಪಿಗಾಗಿ ಕ್ಷಮಿಸು. ಅದನ್ನು ಹೊರತೆಗೆಯಲು ಇನ್ನೊಂದು ಚಿಕ್ಕ ಆಪರೇಷನ್ ಮಾಡಬೇಕಾಗಿದೆ… ಬೂಬಣ್ಣ: ಅಯ್ಯೋ! ಇಷ್ಟು ಚಿಕ್ಕ ವಿಷಯಕ್ಕೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ?! ಈ ಹಣ ತಗೊಂಡು ಒಂದು ಹೊಸಾ ಕೈಗವಸು ಕೊಂಡುಕೊಳ್ಳಿ… »» ಬೂಬಣ್ಣ: ನನ್ನ ಬೆಕ್ಕು ತನ್ನ ಹೆಸರು ತಾನೇ ಹೇಳುತ್ತದೆ! ರಾಮಣ್ಣ: ನಿಜವಾಗಿಯೂ?! ಏನದರ ಹೆಸರು? ಬೂಬಣ್ಣ: "ಮೀಯಾಂವ್"! »» ರಾಮಣ್ಣ: ನಾವು ನೀರಿನಿಂದೇಕೆ ವಿದ್ಯುತ್ ಶಕ್ತಿ ಉತ್ಪಾದಿಸುತ್ತೇವೆ? ಬೂಬಣ್ಣ: ಇಲ್ಲದಿದ್ದರೆ, ನಾವು ನೀರು ಕುಡಿಯುವಾಗ ನಮಗೆ ಶಾಕ್ ಹೊಡೆಯುವುದಿಲ್ಲವೇ?! »» ರಾಮಣ್ಣ: ಬರಲೇ ಬೂಬಣ್ಣ, ನಾನು ಹಂಪನಕಟ್ಟೆಯಲ್ಲಿ ಬಸ್ಸು ಹಿಡಿದು ಹೋಗುತ್ತೇನೆ… ಬೂಬಣ್ಣ: ಅದನ್ನು ಹಿಡಿಯಲು ಹೇಗೆ ಸಾಧ್ಯ?! ಬಸ್ಸುಗಳು ನಿನಗಿಂತ ತುಂಬಾ ದೊಡ್ಡ ಹಾಗೂ ಭಾರ ಇರುತ್ತವೆ.. »» ಬೂಬಣ್ಣ ಚಿಕ್ಕವನಿರುವಾಗ, ದೀಪಾವಳಿ ಸಮಯದಲ್ಲಿ ತನ್ನ ಅಮ್ಮನ ಜೊತೆಯಲ್ಲಿ ಖರೀದಿಗೆ ಹೊರಟಾಗ… ಚಿಕ್ಕ ಬೂಬಣ್ಣ: ಅಮ್ಮಾ! ಅಮ್ಮಾ!.. ನಂಗೆ ಆ ಕೆಂಪು ಬಣ್ಣದ ದೊಡ್ಡ ಪಟಾಕಿ ಬೇಕು! ಅದ್ರಿಂದ ದೊಡ್ಡ ಸದ್ದಾಗುತ್ತದೆ.. ನಂಗದೇ ಬೇಕು!.. ಅಮ್ಮ: ಏನು.. ..!!!!.. ಅಯ್ಯೊ! ದೇವರೇ!! ಮೂರ್ಖಾ! ಅದು ದೊಡ್ಡ ಪಟಾಕಿಯಲ್ಲ, ಗ್ಯಾಸ್ ಸಿಲಿಂಡರು!! »» ಚಿಕ್ಕವನಾಗಿದ್ದಾಗ, ಬೂಬಣ್ಣನಿಗೊಮ್ಮೆ ಒಂದು ಹುಲಿಮರಿ ಸಿಕ್ಕಿತು. ಅದನ್ನು ಹಿಡಿದುಕೊಂಡು ತನ್ನ ತಂದೆಯ ಬಳಿ ತಂದನು.. ಬೂಬಣ್ಣ: ಅಪ್ಪಾ! ನಂಗಿದು ದಾರಿಯಲ್ಲಿ ಸಿಕ್ಕಿತು. ಏನು ಮಾಡಲಿ? ಅಪ್ಪ(ಹೆದರಿಕೊಂಡು): ಅದನ್ನು ಈಗಲೇ ಮೃಗಾಲಯಕ್ಕೆ(zoo) ಕರೆದುಕೊಂಡು ಹೊಗು! ಮರುದಿನ ಬೂಬಣ್ಣನ ಅಪ್ಪ ನೋಡಿದ್ರೆ, ಆ ಹುಲಿಮರಿಯು ಇನ್ನೂ ಬೂಬಣ್ಣನ ಬಳಿಯೇ ಇತ್ತು! ಅಪ್ಪ: ನಿನಗೆ ಹೇಳಿದ್ರೆ ಭಾಷೆ ಇಲ್ಲವೇ?! ಅದನ್ನು ನಿನ್ನೆಯೇ ಮೃಗಾಲಯಕ್ಕೆ ಕರೆದುಕೊಂಡು ಹೋಗೆಂದು ಹೇಳಿದ್ದೆನಲ್ಲಾ.. ಬೂಬಣ್ಣ: ಆದ್ರೆ ಅಪ್ಪಾ! ನೀನು ಹೇಳಿದ ಹಾಗೆಯೇ ನಿನ್ನೆ ಮೃಗಾಲಯಕ್ಕೆ ಅದನ್ನು ಕೊಂಡೊಯ್ದಿದ್ದೆ.. ಇವತ್ತು ಅದನ್ನು ತಿರುಗಾಡಿಸಲು ಒಂದು ಸಿನಿಮಾಕ್ಕೆ ಕರೆದುಕೊಂಡು ಹೋಗೋಣ ಅಂತಿದ್ದೇನೆ.. »» ಚಿಕ್ಕವನಾಗಿದ್ದಾಗ, ಒಮ್ಮೆ ಬೂಬಣ್ಣ ತನ್ನ ತಂದೆಯೊಡನೆ ಊಟ ಮಾಡುತ್ತಿದ್ದನು… ಬೂಬಣ್ಣ: ಅಪ್ಪಾ! ಒಂದು ವಿಷಯ… ಅಪ್ಪ: ಸುಮ್ಮನಿರು! ಊಟ ಮಾಡುವಾಗ ಮಾತನಾಡಬಾರದು! ಬೂಬಣ್ಣ: ಆದ್ರೆ ಅಪ್ಪಾ!… ಅಪ್ಪ: ಹೇಳಿದ್ದು ಗೊತ್ತಾಗಲಿಲ್ವೇ?! ಸುಮ್ಮನಿರು! ಮತ್ತೆ ಬೂಬಣ್ಣ ಸುಮ್ಮನೇ ಊಟ ಮಾಡಿದ. ಅವರ ಊಟ ಮುಗಿದ ನಂತರ… ಅಪ್ಪ: ಈಗ ಹೇಳು, ನಿಂಗೇನು ಹೇಳ್ಬೇಕಿತ್ತು? ಬೂಬಣ್ಣ: ನಿಮ್ಮ ಊಟದಲ್ಲಿ ಒಂದು ಸತ್ತ ಜಿರಳೆ ಬಿದ್ದಿತ್ತು. ಇಷ್ಟೇ ಹೇಳ್ಲಿಕ್ಕಿತ್ತು… »» ಚೋಮಣ್ಣ: ಬೂಬಣ್ಣ! ಸೆಖೆ ಆದಾಗ ಏನು ಮಾಡುವುದು? ಬೂಬಣ್ಣ: ಹವಾನಿಯಂತ್ರಕದ(air conditioner) ಎದುರು ಕುಳಿತುಬಿಡು. ಚೋಮಣ್ಣ: ಇನ್ನೂ ಹೆಚ್ಚಿಗೆ ಸೆಖೆ ಆದರೆ….? ಬೂಬಣ್ಣ: ಆಗ ಹವಾನಿಯಂತ್ರಕವನ್ನು ಚಾಲೂ (on) ಮಾಡು… »» ರೋಗಿ: ನನಗೆ ಬಸ್ಸಿನಲ್ಲಿ ಕುಳಿತ ಕೂಡಲೇ ನಿದ್ರೆ ಬರುತ್ತದೆ… ವೈದ್ಯ: ಅದಕ್ಕೇನೀಗ? ಚೆನ್ನಾಗಿ ನಿದ್ರೆ ಮಾಡಿ. ಏನು ಗೊರಕೆ ಸಮಸ್ಯೆನಾ? ರೋಗಿ: ಪೂರ್ತಿ ಕೇಳಿಸ್ಕೊಳ್ಳಿ ಸಾರ್. ಗೊರಕೆ ಗಿರಕೆ ಆಮೇಲಾಯ್ತು ಬಿಡಿ, ಆ ಬಸ್ಸಿನ ಚಾಲಕ* (driver) ನಾನೇ! »» ಬೂಬಣ್ಣ: ಸ್ವಾಮೀಜಿ! ನಾನು ಏನೂ ಕೆಲಸ ಮಾಡುವ ಅಗತ್ಯವಿಲ್ಲದೇ ಇರೋ ನೌಕರಿ ಯಾವುದಿದೆ? ಅದರಲ್ಲಿ ಬೇರೆಯವರೇ ಕೆಲಸ ಮಾಡಬೇಕು, ಆದರೆ ಹಣ ನನಗೆ ಸಿಗಬೇಕು… ಸ್ವಾಮೀಜಿ: ಮಗೂ.. ಹೋಗು! ಶೌಚಾಲಯದಲ್ಲಿ ಕೆಲಸ ಮಾಡು… »» ಬೂಬಣ್ಣನವರು ಚಿಕ್ಕವರಾಗಿದ್ದಾಗ… ರಾಮಣ್ಣ: ಪರೀಕ್ಷೆಯಲ್ಲಿ ಬರೆಯಲು ನನಗೇನೂ ಗೋಚರಿಸಲಿಲ್ಲ. ಹಾಳೆ ಖಾಲಿ ಬಿಟ್ಟು ಬಂದೆ.. ಚೋಮಣ್ಣ: ನಾನೂ ಸಹ… ಖಾಲಿ ಹಾಳೆ ಕೊಟ್ಟು ಬಂದೆ.. ಬೂಬಣ್ಣ: ಆಯ್ಯಯ್ಯೋ! ನನ್ನ ಹಾಳೆಯೂ ಖಾಲಿಯಾಗೇ ಇತ್ತು! ನಾವು ನಕಲು*(copy) ಹೊಡೆದಿದ್ದೇವೆಂದು ಮೇಷ್ಟ್ರು ಭಾವಿಸುತ್ತಾರೆ!! »» ಜೀವಶಾಸ್ತ್ರದ ಶಿಕ್ಷಕಿ: ನಮಗೆ ಮೊಟ್ಟೆ ಕೊಡುವ ಯಾವುದಾದರೂ ನಾಲ್ಕು ಜೀವಿಗಳ ಹೆಸರು ಹೇಳು. ಬೂಬಣ್ಣ: ಭೌತಶಾಸ್ತ್ರ ಅಧ್ಯಾಪಕರು, ಗಣಿತಶಾಸ್ತ್ರ ಅಧ್ಯಾಪಕರು, ರಾಸಯನಶಾಸ್ತ್ರದ ಅಧ್ಯಾಪಕಿ, ಹಾಗೂ ಕನ್ನಡದ ಅಧ್ಯಾಪಕಿ… »» ತರಗತಿ ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ಚೋಮಣ್ಣ ಎದ್ದು ಹೊರಗೆ ನಡೆದ. ಶಿಕ್ಷಕ: ಇದೇನಿದು?! ಇವನಿಗೇನಾಗಿದೆ? ಬೂಬಣ್ಣ: ಸಾರ್, ಅವನಿಗೆ ಒಳ್ಳೇ ನಿದ್ರೆಯಲ್ಲಿ ನಡೆದಾಡುವ ಅಭ್ಯಾಸವಿದೆ… »» ಬೂಬಣ್ಣನ ಮನೆಯ ಪ್ಲಗ್ನಲ್ಲಿ ಹೊಗೆ ಬರ್ತಾ ಇತ್ತು. ತಕ್ಷಣ ಬೂಬಣ್ಣ ಮೆಸ್ಕೋಮ್ ಗೆ (MESCOM) ಫೋನ್ ಮಾಡಿ, "ಏಯ್! ಯಾರಯ್ಯಾ ಅದು? ಸಿಗರೇಟು ಸೇದಿ ನಮ್ಮನೆ ಪ್ಲಗ್ಗಿನಲ್ಲಿ ಹೊಗೇ ಬಿಡೋದು?!" »» ಬಸ್ ಕಂಡಕ್ಟರ್: ಅಜ್ಜಿ! ಮೂರು ಸಲ ನಿಮ್ಮ ಸ್ಟಾಪ್ ಬಂತು ಅಂತ ಶಿಳ್ಳೆ ಹೊಡೆದ್ರೂ ತಿರುಗಿಯೂ ನೋಡಿಲ್ವಲ್ಲಾ ನೀವು… ಅಜ್ಜಿ: ಮಗೂ, ಶಿಳ್ಳೆ ಹೊಡೆದ್ರೆ ತಿರುಗಿ ನೋಡೊ ವಯಸ್ಸಲ್ಲಪ್ಪಾ ನಂದು… ಹಾಗೂ ಇಂದಿಗೆ ಕೊನೆಯದಾಗಿ… »» ರಾಮಣ್ಣ: ನೀರು ಕುದಿಸಿದಾಗ ಅದರಲ್ಲಿರುವ ಕೀಟಾಣುಗಳೆಲ್ಲ ಸತ್ತು ಹೋಗುತ್ತವೆ. ಆದ್ದರಿಂದ ಕುದಿಸಿದ ನೀರನ್ನು ಸುರಕ್ಷಿತವಾಗಿ ಕುಡಿಯಬಹುದು… ಬೂಬಣ್ಣ: ಅಯ್ಯೋ! ಆದರೆ ಸತ್ತು ಹೋದ ಕೀಟಾಣುಗಳ ಶವಗಳು ಆ ನೀರಲ್ಲೇ ತೇಲುತ್ತಿರುತ್ತವಲ್ಲಾ!!! - ಬಸವರಾಜ್ ಎ.ಎನ್. Basavaraj. A.N. Bangalore. E-mail : angadi.com@gmail.com