ಪ್ರೀಯ ಗೆಳಯರೆ ನಾನು ನಿಮ್ಮ ನಾಗಾರ್ಜುನ್ ಎಂ ಬೆಳಗೆರೆ , ನಾನು ಈ ಬ್ಲಾಗ್ ನ್ನು ನನ್ನ ಹೈಸ್ಕುಲ್ ಗೆಳಯರಿಗೆ ಮತ್ತು ಡಿಇಡಿ ಗೆಳಯರ ಬಳಗಕ್ಕೆ . ನನ್ನ ತಂದೆ ಮಂಜಯ್ಯ್ ಕೆ ಬಿ ಮತ್ತು ತಾಯಿ ರಾಧ ಕೆ ಇವರಿಗೆ ಅರ್ಪಿಸುತ್ತೆನೆ
ಫೆಬ್ರ 15, 2011
ಕರ್ನಾಟಕ
ಕರ್ನಾಟಕ
ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.
"ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.
ಕರ್ನಾಟಕವು ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳನಾಡುವಿನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ರಾಜ್ಯದಲ್ಲಿ ರಾಜಧಾನಿಯಾದ ಬೆಂಗಳೂರು ಮಾತ್ರ ೧೦ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು,ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ.
ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ. ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ. ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು ಜ್ಞಾನಪಪೀಠ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.
ಕರ್ನಾಟಕದ ಚರಿತ್ರೆಯ ಕೆಲ ಅಂಶಗಳು[೧] ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕ್ರತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ವಿಚಾರದಿಂದ ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರಿಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ.
ಕ್ರಿ.ಪೂ.೩೦೦ಕ್ಕಿಂತ ಮೊದಲು, ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ಆಳ್ವಿಕೆಗೆ ಒಳಪಡುವ ಮೊದಲು ನಂದ ಸಾಮ್ರಾಜ್ಯದ ಭಾಗವಾಗಿದ್ದಿತ್ತು. ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು.
ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಈ ಸಾಮ್ರಾಜ್ಯಗಳ ಸ್ಥಾಪನೆಯು ಪ್ರದೇಶದ ಸ್ವತಂತ್ರ ರಾಜಕೀಯ ಅಸ್ತಿತ್ವದ ಪ್ರಾದುರ್ಭಾವಕ್ಕೆ ಕಾರಣವಾಯಿತು. ಕದಂಬ ಸಾಮ್ರಾಜ್ಯವು ಮಯೂರಶರ್ಮನಿಂದ ಸ್ಥಾಪಿಸಲ್ಪಟ್ಟಿತು ಹಾಗು ಅದರ ರಾಜಧಾನಿ ಬನವಾಸಿಯಾಗಿತ್ತು. ತಲಕಾಡು ಪಶ್ಚಿಮ ಗಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು. ಹಲ್ಮಿಡಿ ಶಾಸನವು ಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯವು ಇದಕ್ಕೆ ಸಾಕ್ಷಿಯಾಗಿವೆ.
ಈ ಸಾಮ್ರಾಜ್ಯಗಳ ನಂತರ ದಖನ್ ಅನ್ನು ಬಹುಪಾಲು ಆಳುತ್ತಿರುವ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಠ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯದಾತರಾಗಿದ್ದರು. ಇದು ೧೨ನೆಯ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು. ಕ್ರಿ.ಶ.೯೯೦-೧೨೧೦ವರೆಗೆ ಕರ್ನಾಟಕದ ಕೆಲವು ಪ್ರದೇಶಗಳು ಚೋಳ ಸಾಮ್ರಾಜ್ಯದ ಆಧೀನವಾಗಿತ್ತು.ಈ ಕಾಲದಲ್ಲಿ ಪಶ್ಚಿಮ ಚಾಲುಕ್ಯರು, ಚೋಳ ಹಾಗು ಪೂರ್ವ ಚಾಲುಕ್ಯರ ವಿರುದ್ದ ನಿರಂತರ ಕಾಳಗದಲ್ಲಿರುತ್ತಿದ್ದರು
ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಹೊಯ್ಸಳರು ಕರ್ನಾಟಕದಲ್ಲಿ ಪ್ರಬಲರಾದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಛ್ರಾಯಸ್ಥಿತಿಯನ್ನು ತಲುಪಿದವು. ಇದು ವಿಶಿಷ್ಟ ಕನ್ನಡ ಕಾವ್ಯ ಶೈಲಿಗಳ ಉದಯಕ್ಕೆ ಕಾರಣವಾಯಿತು. ಹೊಯ್ಸಳರ ಕಾಲದಲ್ಲಿ ದೇಗುಲಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು. ಹೊಯ್ಸಳ ಸಾಮ್ರಾಜ್ಯವು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತು. ೧೪ನೆಯ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯವು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆಯಾಯಿತು.
೧೫೬೫ರಲ್ಲಿ,ತಾಳಿಕೋಟೆಯ ಯುದ್ಧದಲ್ಲಿ ದಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು. ಬಹಮನಿ ಸುಲ್ತಾನರ ಪತನಾನಂತರ ಬಿಜಾಪುರದ ಸುಲ್ತಾನರು ಪ್ರಾಬಲ್ಯಕ್ಕೆ ಬಂದು,ದಖನ್ ಪ್ರದೇಶವನ್ನು ಆಳುತ್ತಿದ್ದರು. ೧೭ನೆಯ ಶತಮಾನದ ಕೊನೆಯಲ್ಲಿ ಬಿಜಾಪುರದ ಸುಲ್ತಾನರು ಮೊಘಲ್ ರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ಬಿಜಾಪುರದ ಸುಲ್ತಾನರು ಉರ್ದು ಹಾಗು ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರಾಸೆನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು.
ತದನಂತರದ ಅವಧಿಯಲ್ಲಿ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗು ಅನ್ಯ ರಾಜರು ಆಳುತ್ತಿದ್ದರು. ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಪ್ರದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು. ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು. ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು. ಬ್ರಿಟೀಷರು ಮೈಸೂರು ರಾಜ್ಯವನ್ನು ಒಡೆಯರ್ ಮನೆತನದವರಿಗೆ ಹಿಂದಿರುಗಿಸಿದರು ಹಾಗು ಬ್ರಿಟೀಷ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವ ಪ್ರದೇಶದ ಸ್ಥಾನಮಾನ ನೀಡಿತು.
ಭಾರತಾದ್ಯಂತ ಬ್ರಿಟೀಷರ "ಡಾಕ್ಟ್ರೈನ್ ಆಫ್ ಲ್ಯಾಪ್ಸ್ " ರಾಜನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ, ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ೧೮೩೦ರಲ್ಲಿ ಅಂದರೆ ೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ೩ ದಶಕಗಳ ಹಿಂದೆ ಬ್ರಿಟೀಷರ ವಿರುದ್ಧ ದಂಗೆಯೆದ್ದರು. ತದನಂತರ ಸೂಪ, ಬಾಗಲಕೋಟೆ, ಶೋರಾಪುರ, ನರಗುಂದ ಹಾಗು ದಾಂಡೇಲಿ ಹೀಗೆ ಹಲವೆಡೆಗಳಲ್ಲಿ ದಂಗೆಗಳು ನಡೆಯಿತು. ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ದಂಗೆಗಳನ್ನು ಮುಂಡರಗಿ ಭೀಮರಾವ್, ಭಾಸ್ಕರ ರಾವ್ ಭಾವೆ, ಹಳಗಳಿ ಬೇಡರು, ವೆಂಕಟಪ್ಪ ನಾಯಕ ಮುಂತಾದವರು ಮುನ್ನಡೆಸಿದರು. ೧೯ನೆಯ ಶತಮಾನದ ಅಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯು ತೀವ್ರವಾಯಿತು. ಕಾರ್ನಾಡ ಸದಾಶಿವ ರಾವ್, ಆಲೂರು ವೆಂಕಟರಾಯರು, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ನಿಟ್ಟೂರು ಶ್ರೀನಿವಾಸ ರಾವ್ ಮುಂತಾದವರು ೨೦ನೆಯ ಶತಮಾನದ ಪೂರ್ವಾರ್ಧದವರೆಗೂ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿಕೊಂಡು ಬಂದರು.
ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ "ರಾಜಪ್ರಮುಖ"ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.
ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧, ೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದರಾಬಾದ್, ಮತ್ತು ಮುಂಬೈ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.ದ
ರಾಜ್ಯದಲ್ಲಿ ಮೂರು ಮುಖ್ಯ ಭೌಗೋಳಿಕ ಪ್ರದೇಶಗಳಿವೆ:
* ಕರಾವಳಿ ಪ್ರದೇಶ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.
* ಮಲೆನಾಡು - ಪಶ್ಚಿಮ ಘಟ್ಟಗಳು, ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.
* ಬಯಲು ಸೀಮೆ - ದಖ್ಖನ್ ಪ್ರಸ್ತಭೂಮಿ(ಅಥವಾ ದಕ್ಷಿಣ ಪ್ರಸ್ಥ ಭೂಮಿ), ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ.
ಕರ್ನಾಟಕದ ಬಯಲು ಪ್ರದೇಶದ ಉತ್ತರ ಭಾಗವು ಭಾರತದ ಎರಡನೆಯ ಅತಿ ದೊಡ್ಡ ಶುಷ್ಕ ಪ್ರದೇಶವಾಗಿದೆ. ಕರ್ನಾಟಕದ ಎತ್ತರದ ತುದಿಯು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟವಾಗಿದೆ (ಎತ್ತರ ೧೯೨೯ ಮೀ.(೬೩೨೯ ಅಡಿಗಳು))
ಕರ್ನಾಟಕದ ಜಿಲ್ಲೆಗಳು
ಒಟ್ಟು ೩೦ ಜಿಲ್ಲೆಗಳು
1. ಬಾಗಲಕೋಟೆ
2. ಬೆಂಗಳೂರು
3. ಬೆಂಗಳೂರು ಗ್ರಾಮೀಣ
4. ಬೆಳಗಾವಿ
5. ಬಳ್ಳಾರಿ
6. ಬೀದರ್
7. ಬಿಜಾಪುರ
8. ಚಾಮರಾಜನಗರ
9. ಚಿಕ್ಕಮಗಳೂರು
10. ಚಿತ್ರದುರ್ಗ
11. ದಕ್ಷಿಣ ಕನ್ನಡ
12. ದಾವಣಗೆರೆ
13. ಧಾರವಾಡ
14. ಗದಗ್
15. ಗುಲ್ಬರ್ಗ
16. ಹಾಸನ
17. ಹಾವೇರಿ
18. ಕೊಡಗು
19. ಕೋಲಾರ
20. ಕೊಪ್ಪಳ
21. ಮಂಡ್ಯ
22. ಮೈಸೂರು
23. ರಾಯಚೂರು
24. ಶಿವಮೊಗ್ಗ
25. ತುಮಕೂರು
26. ಉಡುಪಿ
27. ಉತ್ತರ ಕನ್ನಡ
28. ರಾಮನಗರ
29. ಯಾದಗಿರಿ
30. ಚಿಕ್ಕಬಳ್ಳಾಪುರ
೨೦೦೧ರ ಜನಗಣತಿ ಪ್ರಕಾರ, ಕರ್ನಾಟಕದ ಜನಸಂಖ್ಯೆಯು ೫೨,೮೫೦,೫೬೨ ಆಗಿದೆ ಹಾಗು ಇದರಲ್ಲಿ ಪುರುಷರ ಸಂಖ್ಯೆ ೨೬,೮೯೮,೯೧೮(೫೦.೮೯%) ಹಾಗು ಸ್ತೀಯರ ಸಂಖ್ಯೆ ೨೫,೯೫೧,೬೪೪(೪೯.೧೧%) ಅಂದರೆ ಪ್ರತಿ ೧೦೦೦ ಪುರುಷರಿಗೆ ೯೬೪ ಸ್ತೀಯರು. ೧೯೯೧ರ ಜನಸಂಖ್ಯೆಕ್ಕಿಂತ ೨೦೦೧ರ ಜನಸಂಖ್ಯೆ ೧೭.೨೫%ರಷ್ಟು ಹೆಚ್ಚಿದೆ. ಜನಸಂಖ್ಯಾ ಸಾಂದ್ರತೆಯು ೨೭೫.೬/ಚ.ಕಿಮೀ.ರಷ್ಟಿದೆ ಹಾಗು ನಗರಪ್ರದೇಶಗಳಲ್ಲಿ ೩೩.೯೮%ರಷ್ಟು ಜನ ವಾಸಿಸುತ್ತಾರೆ.
ಸಾಕ್ಷರತೆಯು ೬೬.೬%ರಷ್ಟಿದೆ,ಇದರಲ್ಲಿ ಪುರುಷರ ಸಾಕ್ಷರತೆಯು ೭೬.೧% ಮತ್ತು ಸ್ತೀಯರ ಸಾಕ್ಷರತೆಯು ೫೬.೯%ರಷ್ಟಿದೆ.
ಜನಸಂಖ್ಯೆಯ ೮೩% ಹಿಂದುಗಳು, ೧೧% ಮುಸಲ್ಮಾನರು, ೪% ಕ್ರೈಸ್ತ ಧರ್ಮದವರು, ೦.೭೮% ಜೈನರು, ೦.೭೩% ಬುದ್ಧ ಧರ್ಮದವರು ಮತ್ತು ಉಳಿದವರು ಅನ್ಯ ಧರ್ಮದವರು.
ಕನ್ನಡವು ಕರ್ನಾಟಕದ ಆಡಳಿತ ಭಾಷೆಯಾಗಿದೆ ಹಾಗು ಸುಮಾರು ೬೪.೭೫%ರಷ್ಟು ಜನರ ಮಾತೃಭಾಷೆಯಾಗಿದೆ. ೧೯೯೧ರಲ್ಲಿ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರಲ್ಲಿ ೯.೭೨% ಉರ್ದು, ೮.೩೪% ತೆಲುಗು, ೫.೪೬% ತಮಿಳು, ೩.೯೫% ಮರಾಠಿ, ೩.೩೮% ತುಳು, ೧.೮೭% ಹಿಂದಿ, ೧.೭೮% ಕೊಂಕಣಿ, ೧.೬೯% ಮಲಯಾಳಂ ಮತ್ತು ೦.೨೫% ಕೊಡವ ತಕ್ ಮಾತಾಡುವ ಜನರಿದ್ದರು.
ಕರ್ನಾಟಕದ ಜನನ ದರವು ೧೯.೯(ಪ್ರತಿ ಸಾವಿರ ಜನರಿಗೆ), ಮೃತ್ಯು ದರವು ೭.೩(ಪ್ರತಿ ಸಾವಿರ ಜನರಿಗೆ), ಶಿಶು ಮೃತ್ಯು ದರವು ೪೭(ಪ್ರತಿ ಸಾವಿರ ಜನನಗಳಿಗೆ), ಮಾತೃ ಮೃತ್ಯು(ಜನನ ಸಮಯದ) ದರವು ೨೧೩(ಪ್ರತಿ ಲಕ್ಷ ಜನನಗಳಿಗೆ), ಒಟ್ಟು ಸಂತಾನ ದರವು(ಪ್ರತಿ ಮಹಿಳೆಗೆ ಅವಳ ಸಂತಾನೋತ್ಪತ್ತಿ ಕಾಲದಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ) ೨.೧ ಆಗಿದೆ.[೩
ಕರ್ನಾಟಕದ ಕೆಲವು ಜನಪ್ರಿಯ ಸಾಂಸ್ಕೃತಿಕ ಕಲೆಗಳು:
* ಸಂಗೀತ: ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಕರ್ನಾಟಕ ಸಂಗೀತ ಉಗಮವಾದದ್ದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಇತರ ಸಂಗೀತ ರೂಪಗಳಲ್ಲಿ ಭಾವಗೀತೆಗಳು, ಸುಗಮ ಸಂಗೀತ, ಚಿತ್ರಗೀತೆಗಳು ಸೇರಿವೆ.
* ನೃತ್ಯ: ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ಕರ್ನಾಟಕಕ್ಕೆ ವಿಶಿಷ್ಟವಾದ ಒಂದು ನೃತ್ಯಕಲೆ ಯಕ್ಷಗಾನ. ಡೊಳ್ಳು ಕುಣಿತ ಜಾನಪದ ನೃತ್ಯ ಪದ್ಧತಿಗಳಲ್ಲಿ ಒಂದು.
ಸಂಸ್ಕೃತಿಯ ಕೇಂದ್ರವಾದ ಕರ್ನಾಟಕ, ಮೈಸೂರು, ಹಳೇಬೀಡು, ಬೇಲೂರು ಮುಂತಾದ ರಮಣೀಯ ತಾಣಗಳಿಗೆ ಮನೆಯಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ