ಜೂನ್ 14, 2011

ಸ್ವಾಮಿ ವಿವೇಕಾನಂದರೂ ಕ್ರೂರ ಮೃಗಗಳೂ


ರಾಮಕೃಷ್ಣ ಪರಮಹಂಸರ ಶಿಷ್ಯರುಗಳಲ್ಲಿ ಅಗ್ರಗಣ್ಯರೂ. ತುಂಬಾ ಸುಪ್ರಸಿದ್ಧರೂ ಆದ ಸ್ವಾಮಿ ವಿವೇಕಾನಂದರ (1862-1902) ಪೂರ್ವಾಶ್ರಮನಾಮ ನರೇಂದ್ರನಾಥ್ ಎಂಬುದಾಗಿತ್ತು. ಅದ್ವಿತೀಯವಾದ ತಮ್ಮ ಆಧ್ಯಾತ್ಮಿಕ ಪಾರಂಪರ್ಯವನ್ನು ಗುರುತಿಸುವಂತೆ ಭಾರತೀಯರನ್ನು ತಟ್ಟಿ ಏಳಿಸುವ ಗುರುತರ ಜವಾಬ್ದಾರಿಯನ್ನು ಅವರು ತಮ್ಮ ಲಕ್ಷ್ಯವಾಗಿ ಹೊಂದಿದ್ದರು. ಚಿಕಾಗೋದಲ್ಲಿ (1893) ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಆವೇಶಭರಿತವಾದ ಉಪನ್ಯಾಸದ ಮೂಲಕ ಪಾಶ್ಚಾತ್ಯ ಪ್ರಪಂಚವು ಭಾರತದ ಮಹೋನ್ನತವಾದ ಆಧ್ಯಾತ್ಮಿಕ ಜ್ಞಾನವನ್ನು ಗ್ರಹಿಸುವಂತೆ ಮಾಡಿದರು.

ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರು ಪರಮಪದ ಹೊಂದಿದ ನಂತರ, ಅವರ ಸಂದೇಶವನ್ನು ದೇಶದ ಪ್ರಜೆಗಳ ಬಳಿಗೆ ಮುಟ್ಟಿಸುವುದಕ್ಕಾಗಿ ಯುವಕರಾದ ಸ್ವಾಮಿ ವಿವೇಕಾನಂದರು ದೇಶದ ನಾಲ್ಕೂ ದಿಕ್ಕುಗಳನ್ನು ಸುತ್ತಿ ಬಂದರು. ಆ ಕಾಲ ಘಟ್ಟದಲ್ಲಿ ಒಂದು ದಿನ ಅವರು ವಾರಣಾಸಿಯ ಸಮೀಪದಲ್ಲಿ ನಿರ್ಜನವಾಗಿದ್ದ ಒಂದು ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದರು. ಆಗ ಭಯಂಕರವಾದ ಕಪಿಗಳ ಗುಂಪೊಂದು ಅವರ ಬೆನ್ನು ಹತ್ತಿತು. ಅವರು ಅವುಗಳಿಂದ ದೂರವಾಗಿ ಓಡಲಾರಂಭಿಸಿದರು. ಆದರೆ ಕೋತಿಗಳಷ್ಟು ವೇಗವಾಗಿ ಅವರಿಂದ ಹೇಗೆ ಓಡಲು ಸಾಧ್ಯ! ಅವರಿಗೂ, ಕೋತಿಗಳ ಗುಂಪಿಗೂ ಇದ್ದ ಅಂತರವು ಕಡಿಮೆಯಾಗುತ್ತಾ ಬಂದುದರಿಂದ ಅವರಲ್ಲಿ ಭಯ ಹುಟ್ಟಿತು. ಆಗ ಇದ್ದಕ್ಕಿದ್ದಂತೆ, ‘‘ಓಡಬೇಡ ಕೋತಿಗಳನ್ನು ಎದುರಿಸು’’ ಎಂಬ ವಾಣಿಯು ಕೇಳಿಬಂದಿತು. ವಿವೇಕಾನಂದರು ಓಡುವುದನ್ನು ನಿಲ್ಲಿಸಿ, ಅಲ್ಲಿಯೇ ನಿಂತು, ಕೋತಿಗಳ ಕಡೆಗೇ ಕೋಪದಿಂದ ತಿರುಗಿ ನೋಡಿದರು. ಬೆದರಿ ಹೋದ ಕೋತಿಗಳು ತಟಕ್ಕನೆ ನಿಂತು ಬಿಟ್ಟವು. ಅವರು ನೋಡುತ್ತಿದ್ದಂತೆಯೇ ಅವು ಮೆಲ್ಲಮೆಲ್ಲಗೇ ಹಿಂಜರಿದು, ಎತ್ತಲೋ ಹೊರಟು ಹೋದುವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ